``ಯಕ್ಷಗಾನಕ್ಕೆ ಖಂಡಿತ ಪ್ರೇಕ್ಷಕರ ಕೊರತೆ ಇಲ್ಲ ``- ರವಿರಾಜ ಹೆಗ್ಡೆ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ಆಗಸ್ಟ್ 4 , 2013
|
ಮುಂಬಯಿ , ಆಗಸ್ಟ್ 4 , 2013
|
"ಯಕ್ಷಗಾನಕ್ಕೆ ಖಂಡಿತ ಪ್ರೇಕ್ಷಕರ ಕೊರತೆ ಇಲ್ಲ " - ರವಿರಾಜ ಹೆಗ್ಡೆ
ಮುಂಬಯಿ :
ಮಹಾನಗರದಲ್ಲಿ ಹಿಂದೆ ತೆಂಕು-ಬಡಗುತಿಟ್ಟು ಸೇರಿ ಅನೇಕ ಮೇಳಗಳು ಮಳೆಗಾಲದ ಪ್ರದರ್ಶನಕ್ಕೆ ಆಗಮಿಸಿ, ಯಶಸ್ವಿ ಪ್ರದರ್ಶನಗಳನ್ನು ನೀಡುತ್ತಿದ್ದವು. ಆದರೆ ಕಾಲಕಳೆದಂತೆ ಇಡಿರಾತ್ರಿ ಪ್ರದರ್ಶನಕ್ಕೆ ಪ್ರೇಕ್ಷಕರ ಕೊರತೆ ಕಂಡುಬಂದು ಇಂದು ಕಲಾಭಿಮಾನಿಗಳ ಅನುಕೂಲಕ್ಕಾಗಿ ಕಾಲಮಿತಿ ಪ್ರದರ್ಶನದ ಯಕ್ಷಗಾನ ತಂಡಗಳನ್ನು ರಚಿಸಿಕೊಂಡು ಈ ಮಹಾನಗರಕ್ಕೆ ಆಗಮಿಸಿ ತನ್ನ ತವರೂರ ಕಲಾಭಿಮಾನಿಗಳಿಗೆ ಯಕ್ಷಗಾನ ಸವಿ ಉಣಬಡಿಸುತ್ತಿರುವುದು ಸಂತೋಷದ ಸಂಗತಿ. ಇಂದಿನ ಪ್ರದರ್ಶನ ನೋಡುವಾಗ ಯಕ್ಷಗಾನಕ್ಕೆ ಖಂಡಿತ ಪ್ರೇಕ್ಷಕರ ಕೊರತೆ ಇಲ್ಲ. ಇಂತಹ ಕಲಾಪೋಷಕರಿಂದ ನಿರಂತರ ಯಕ್ಷಗಾನ ಪ್ರದರ್ಶನಕ್ಕೆ ಪ್ರೋತ್ಸಾಹ ಸಿಗುತ್ತಿರಲಿ ಮತ್ತು ಪ್ರದರ್ಶನ ನಡೆಯುತ್ತಿರಲಿ ಎಂದು ರವಿರಾಜ ಹೆಗ್ಡೆ ನುಡಿದರು.
|
ಕಾರ್ಯಕ್ರಮದಲ್ಲಿ ಉಪಸ್ಥಿತ ಅತಿಥಿಗಣ್ಯರು.
|
ಅವರು ಯಕ್ಷ ಸೌರಭ ಪ್ರವಾಸಿ ಮೇಳ ಕುಂದಾಪುರ ಇದರ ವತಿಯಿಂದ ಥಾಣೆಯ ಕಿಸನ್ ನಗರದ ಮುನ್ಸಿಪಾಲ್ ಶಾಲೆಯ ಸಭಾಂಗಣದಲ್ಲಿ ಆ. 2 ರಂದು ಜರಗಿದ ಯಕ್ಷಗಾನ ಪ್ರದರ್ಶನದ ಮಧ್ಯೆ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು, ಮಾತನಾಡಿದರು.
ಕ್ಷೇಮ ನಿಧಿ ಗೌರವ ಸ್ವೀಕರಿಸಿ ಮಾತನಾಡಿದ ಮಂಡಳಿಯ ಸಂಚಾಲಕ ಮಹಮ್ಮದ್ ಗೌಸ್ ಅವರು ಮಾತನಾಡಿ, ಮುಸ್ಲಿಮ್ ಧರ್ಮದವನಾದ ನಾನು ಕಳೆದ 25 ವರ್ಷಗಳಿಂದ ಈ ಕ್ಷೇತ್ರದಲ್ಲಿ ಕಲಾ ಸೇವೆ ಮಾಡುತ್ತಿದ್ದೇನೆ. ಈ ಯಕ್ಷಗಾನ ಕ್ಷೇತ್ರದಲ್ಲಿ ಒಬ್ಬ ಕಲಾವಿದನಾಗಿ ನಿಮ್ಮ ಮುಂದೆ ಈ ಯಕ್ಷ ಗೌರವ ಪಡೆಯುತ್ತಿರುವುದು ನನ್ನ ಭಾಗ್ಯ ಎಂದು ಭಾವಿಸುತ್ತೇನೆ ಎಂದು ನುಡಿದರು.
ಸ್ಥಳೀಯ ಉದ್ಯಮಿ ಎಸ್. ಎಂ. ಬಂಗೇರ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬಿಲ್ಲವರ ಅಸೋಸಿಯೇಶನ್ ಥಾಣೆ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಕೋಟ್ಯಾನ್, ಉದ್ಯಮಿಗಳಾದ ವಾಸು ಪೂಜಾರಿ ಬಾಂಢೂಪ್, ಪುರುಷೋತ್ತಮ್ ಕೋಟ್ಯಾನ್, ಸದಾನಂದ ಅಂಚನ್, ಕೃಷ್ಣ ಪೂಜಾರಿ, ಶಂಕರ ಪೂಜಾರಿ, ಶ್ರೀಧರ ಪೂಜಾರಿ ಕೋಡಿ ಮತ್ತು ಕಲಾವಿದ ಮಹಮ್ಮದ್ ಗೌಸ್, ಕಾರ್ಯಕ್ರಮದ ಸಂಯೋಜಕ ವಿಶ್ವನಾಥ ಪೂಜಾರಿ, ನಾಗರಾಜ ಅಪ್ಸೆàಡಿ ಹೇರಂಜಾಲು, ಎಲ್. ಬಿ.ಬಂಗೇರ ಉಪ್ಪೂರು ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಸಿ. ಎ. ಪೂಜಾರಿ, ಗೋಪಾಲ ಪೂಜಾರಿ, ಪ್ರೇಮಾನಂದ ಕುಕ್ಯಾನ್, ದಿನೇಶ್ ಗಾಣಿಗ, ಕೃಷ್ಣ ಪೂಜಾರಿ ದಿಘಾ, ಗೋಪಾಲ ದೇವಾಡಿಗ ಹೇರಂಜಾಲು, ಉದ್ಯಮಿ ಭೋಜರಾಜ್, ಸೆನ್ಸಾರ್ ಮಂಡಳಿಯ ಸದಸ್ಯ ರಂಗಪೂಜಾರಿ ಅವರನ್ನು ಹೂಗುಚ್ಚವನ್ನಿತ್ತು ಗೌರವಿಸಲಾಯಿತು. ಯಕ್ಷ ತಂಡದ ಎಲ್ಲ ಕಲಾವಿದರಿಗೂ ಹಾಗೂ ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದ ಕೊಳಲಿ ಕೃಷ್ಣ ಶೆಟ್ಟಿ ಮತ್ತು ಅನಾರೋಗ್ಯದಲ್ಲಿರುವ ಹಿರಿಯ ಕಲಾವಿದ ದಯಾನಂದ ನಾಗೂರು ಅವರಿಗೆ ಮುಖ್ಯ ಅತಿಥಿಗಳು ಕ್ಷೇಮನಿಧಿ ವಿತರಿಸಿದರು. ಪ್ರೋ| ವೆಂಕಟೇಶ್ ಪೈ ಕಾರ್ಯಕ್ರಮ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕೊನೆಗೆ ನಾಗಶ್ರೀ ಯಕ್ಷಗಾನ ಪ್ರಸಂಗ ಪ್ರದರ್ಶಿಸಲ್ಪಟ್ಟಿತ್ತು.
|
|
|